<p>ಸರಕಾರಿ ಶಾಲೆಯ ಬಗ್ಗೆ ಅಸಡ್ಡೆ ಮಾಡುವುದು ಸರಿಯಲ್ಲ.ನನ್ನಂತಹವರಿಗೆ ಸಮಾಜದಲ್ಲಿ ಒಂದು ಗೌರವ ಸ್ಥಾನ ಸಿಕ್ಕಿದ್ದರೆ ಅದು ಸರಕಾರಿ ಕನ್ನಡ ಶಾಲೆಯಲ್ಲಿ ಕಲಿತ ಕಾರಣ. ಆದುದರಿಂದ ಗಡಿನಾಡ ಇಂತಹ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸ ನಾವು ಮಾಡ ಬೇಕಿದೆ.ನಾವು ಮಾಡುವ ವಾರ್ಷಿಕೋತ್ಸವ ಮಕ್ಕಳ ಪ್ರತಿಭೆಗೆ ಒಂದು ವೇದಿಕೆಯಾಗಲಿ ಎಂದು ಹೇಳಿ ವಾರ್ಷಿಕೋತ್ಸವದ ಯಶಸ್ಸಿಗೆ ಎಲ್ಲರ ಸಹಕಾರವನ್ನು ಕೋರಿದರು.ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ ಶಿಕ್ಷಕ ಶಿವಕುಮಾರ್ ತನ್ನ ಗಳಿಕೆಯಲ್ಲಿ ಇಂತಹ ಸೇವೆ ಮಾಡುತ್ತಿರುವುದು ಎಲ್ಲರಿಗೂ ಆದರ್ಶವಾಗಿದೆ ಎಂದು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅಭಿಪ್ರಾಯಪಟ್ಟರು.ಅವರು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಮುಂಡೂರು- 1 ಇದರ ವಾರ್ಷಿಕೋತ್ಸವ ಕಾರ್ಯಕ್ರಮ ಡಿ.14 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>
<p> ಕಾಸರಗೋಡು ತಾಲೂಕಿನ ಬೆಂಗಪದವು ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಗುರು ಶಿವಕುಮಾರ್ ಆಮಂತ್ರಣ ಪತ್ರ ಬಿಡುಗಡೆ ಗೊಳಿಸಿದರು.</p>
<p> <strong>ಗೌರವಾರ್ಪಣಾ ಕಾರ್ಯಕ್ರಮ;</strong> ಆಮಂತ್ರಣ ಪತ್ರ ಬಿಡುಗಡೆ ನಂತರ ಶಾಲೆಗೆ ಕಳೆದ ಎರಡು ವರ್ಷಗಳಿಂದ ಗೌರವ ಶಿಕ್ಷಕಿಗೆ ಗೌರವ ಧನ ನೀಡುತ್ತಿರುವ ಕಾಸರಗೋಡು ತಾಲೂಕಿನ ಬೆಂಗಪದವು ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಪರಿಸರ ಪ್ರೇಮಿ ಶಿವಕುಮಾರ್ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.ಗೌರವಾರ್ಪಣೆ ನಂತರ ತನ್ನ ಅನಿಸಿಕೆ ವ್ಯಕ್ತ ಪಡಿಸಿದ ಶಿವಕುಮಾರ್ ಮಾತನಾಡಿ ಸರಕಾರಿ ಕನ್ನಡ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇದು ನನ್ನ ಒಂದು ಅಳಿಲು ಸೇವೆ. ಸರಕಾರಿ ಶಾಲೆಯಲ್ಲಿ ಒಳ್ಳೆಯ ಚಟುವಟಿಕೆ, ಉತ್ತಮ ಶಿಕ್ಷಕರು ಮತ್ತು ಉತ್ತಮ ಕಾರ್ಯಕ್ರಮ ನಡೆದು ಗುಣಮಟ್ಟದ ಶಿಕ್ಷಣ ಸಿಕ್ಕಿದರೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಆಸಕ್ತಿ ವಹಿಸುತ್ತಾರೆ.ಇಲ್ಲಿ 50ರ ಒಳಗೆ ಇರುವ ಮಕ್ಕಳ ಸಂಖ್ಯೆಯನ್ನು ಮುಂದೆ 100 ಮಾಡುವ ಗುರಿ ಮುಟ್ಟಲು ಪ್ರಯತ್ನಿಸಿದಾಗ ಇಂತಹ ಸರಕಾರಿ ಶಾಲೆ ಉಳಿದು ಬೆಳೆಯುತ್ತದೆ ಎಂದು ಹೇಳಿ ಗೌರವಾರ್ಪಣೆಯನ್ನು ಅಪೇಕ್ಷಿಸದ ತನ್ನನ್ನು ಗೌರವಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಶಾಲೆಯಲ್ಲಿ ಮುಂದೆ ಒಳ್ಳೆಯ ಕಾರ್ಯಕ್ರಮ ನಡೆಸುವಲ್ಲಿ ತನ್ನ ಸಹಕಾರ ನೀಡುವುದಾಗಿ ತಿಳಿಸಿದರು.</p>
<p> ಎಸ್.ಡಿ.ಎಂ.ಸಿ. ಅಧ್ಯಕ್ಷ ಭಾಸ್ಕರ ಕರ್ಕೇರ ಮಾತನಾಡಿ ಶಾಲೆಯ ಅಭಿವೃದ್ಧಿಗೆ ಊರವರ ಸಹಕಾರ ಅಗತ್ಯ.ಇದೀಗ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳಿಗೆ ಶ್ರಮದಾನದ ಮೂಲಕ ಸಹಕರಿಸುತ್ತಿರುವುದು ಸಂತಸ ತಂದಿದೆ. ವಾರ್ಷಿಕೋತ್ಸವದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡುವಂತೆ ವಿನಂತಿಸಿದರು.ವಾರ್ಷಿಕೋತ್ಸವ ಸಮಿತಿಯ ಕಾರ್ಯದರ್ಶಿ ಗುರುವ.ಬಿ ಮಾತನಾಡಿ ಎಲ್ಲರಿಗೂ ಸರಕಾರ ಉದ್ಯೋಗ ಬೇಕು ಆದರೆ ಸರಕಾರಿ ಶಾಲೆ ಮಾತ್ರ ಬೇಡ. ಸರಕಾರಿ ಶಾಲೆ ಉಳಿದರೆ ಮಾತ್ರ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ. ವಾರ್ಷಿಕೋತ್ಸವ ಕಾರ್ಯಕ್ರಮ ಯಶಸ್ಸಿಗೆ ಎಲ್ಲರೂ ಸಹಕರಿಸುವಂತೆ ವಿನಂತಿಸಿದರು.</p>
<p> ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಶಾಲೆಯಲ್ಲಿ ಕಲಿತ ಎಷ್ಟೋ ಮಹನೀಯರು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.ಆದುದರಿಂದ ಗುಣಮಟ್ಟದ ಶಿಕ್ಷಣ ಸಿಗುವುದು ಇಂತಹ ಸರಕಾರಿ ಶಾಲೆಗಳಲ್ಲಿ ಮಾತ್ರ. ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಉಳಿಸಿ ಬೆಳೆಸುವ ಕೆಲಸ ಮಾಡುವಂತೆ ಹೇಳಿ ವಾರ್ಷಿಕೋತ್ಸವ ಕಾರ್ಯಕ್ರಮ ಯಶಸ್ವಿಯಾಗಲೆಂದು ಶುಭ ಹಾರೈಸಿದರು.</p>
<p> ವಿಧ್ಯಾರ್ಥಿನಿಯರು ಪ್ರಾರ್ಥಿಸಿ ಮುಖ್ಯ ಶಿಕ್ಷಕಿ ಆಶಾ.ಎನ್ ಸ್ವಾಗತಿಸಿದರು.ಸಹಶಿಕ್ಷಕಿ ಸೌಮ್ಯ ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು. ಸಹಶಿಕ್ಷಕಿ ಸಾವಿತ್ರಿ ವಂದಿಸಿದರು.ಅತಿಥಿ ಶಿಕ್ಷಕಿ ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.ಶಾಲಾ ನಾಯಕ ಮಿಥುನ್, ವಿದ್ಯಾರ್ಥಿಗಳಾದ ಪ್ರಜ್ಞಾ, ರಕ್ಷಿತ್,ಕೃತಿಕಾ, ಮೂವಿಕಾ ಅತಿಥಿಗಳಿಗೆ ಹೂಗುಚ್ಚ ನೀಡಿ ಗೌರವಿಸಿದರು. ಗೌರವ ಶಿಕ್ಷಕಿ ಭಾರತಿ ಸಹಕರಿಸಿದರು.ಎಸ್.ಡಿ.ಎಂ.ಸಿ ಸದಸ್ಯರು, ಅಕ್ಷರ ದಾಸೋಹ ಸಿಬ್ಬಂದಿಗಳು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಪಾಲ್ಗೊಂಡರು.</p>