ʼದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಸರಿಯಾಗಿಲ್ಲ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬೊಬ್ಬೆ ಹೊಡೆಯುವುದು ಅವರೇ, ಈಗ ಪೊಲೀಸ್ ಕಮಿಷನರ್, ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಬದಲಾಯಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರನ್ನು ಗಡಿಪಾರು ಮಾಡಿದಾಗಲೂ ಬೊಬ್ಬೆ ಹೊಡೆಯುವವರೂ ಅವರೇ ಹೀಗಾದರೆ ಬಿಜೆಪಿ ನಾಯಕರಿಗೆ ಬೇಕಿರುವುದು ಏನು? ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯಿದ್ದರೆ ತಮ್ಮ ಬೇಳೆ ಬೇಯುವುದಿಲ್ಲ ಎಂಬ ಅರ್ಥ ಅಲ್ಲವೇ? ರೌಡಿಗಳನ್ನು ಹಿಂದೂ ನಾಯಕ, ಮುಸ್ಲಿಂ ನಾಯಕ ಎನ್ನುವುದು ಯಾಕೆ? ಅವರನ್ನು ಬೇಕಾದರೆ ಅವರು ಇರುವ ಸಂಘಟನೆಗಳ ಹೆಸರಿನಿಂದ ಕರೆಯಲಿ ಅದನ್ನು ಬಿಟ್ಟು ಆತ ಹಿಂದೂ ನಾಯಕ, ಈತ ಮುಸ್ಲಿಂ ನಾಯಕ ಎಂದು ಕರೆಯಲು ಧರ್ಮವನ್ನು ರೌಡಿಗಳಿಗೆ ಗುತ್ತಿಗೆ ಕೊಟ್ಟಿದ್ದಾರೆಯೇ? ರೌಡಿಯೊಬ್ಬ ಒಂದು ಸಮುದಾಯಕ್ಕೆ ಸೇರಿದ್ದು ಕೊಲೆಯಾದರೆ ಆತನನ್ನು ಹಿಂದೂ ನಾಯಕ ಎಂದು ಕರೆಯುವುದು ಸರಿಯಲ್ಲʼ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ʻಇನ್ನು ರಾಜ್ಯಮಟ್ಟದ ಸುದ್ದಿ ಮಾಧ್ಯಮಗಳಲ್ಲಿ ಕರಾವಳಿಯಲ್ಲಿ ಕೋಮು ದಳ್ಳುರಿ, ಕೋಮು ಘರ್ಷಣೆ, ಕೋಮು ಗಲಭೆ ಎಂದೆಲ್ಲ ಪ್ರಸಾರ ಮಾಡುತ್ತಾರೆ. ಆದರೆ ಕರಾವಳಿ ಅನ್ನೋದು ಕಾರವಾರದವರೆಗೆ ಇದೆ. ಈಗ ನಡೆಯುತ್ತಿರುವುದು ಕೋಮು ಗಲಭೆ, ಘರ್ಷಣೆ ಏನೂ ಅಲ್ಲ ಇದು ಕೋಮು ಹತ್ಯೆ ಮಾತ್ರ. ಅದೂ ಮಂಗಳೂರು ಕೇಂದ್ರೀಕರಿಸಿ ಸುತ್ತಲಿನ ೧೦ ಕಿ.ಮೀ. ವ್ಯಾಪ್ತಿಗೆ ಮಾತ್ರ ಸೀಮಿತವಾಗಿದೆ. ಪುತ್ತೂರು, ದಕ್ಷಿಣ ಕನ್ನಡ, ಸುಳ್ಯ, ಮೂಲ್ಕಿ ಮೂಡಬಿದ್ರೆ, ಉಡುಪಿ ಜಿಲ್ಲೆ, ಕಾರ್ಕಳ, ಕುಂದಾಪುರ ಇಲ್ಲೆಲ್ಲ ಯಾವ ಘಟನೆಗಳು ನಡೆದಿವೆ? ಹೀಗಿರುವಾಗ ಕರಾವಳಿ ಎಂದು ಕರೆದು ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಯ ಮಾನ ಹರಾಜು ಹಾಕುವುದು ಸರಿಯೇ? ಇನ್ನಾದರೂ ಮಾಧ್ಯಮಗಳು ಇದನ್ನು ಅರ್ಥ ಮಾಡಿಕೊಳ್ಳಲಿʼ ಎಂದರು.
ʻಜಿಲ್ಲೆಯಲ್ಲಿ ನಡೆದಿರುವ ಕೋಮು ಹತ್ಯೆ, ಅಹಿತಕರ ಘಟನೆಗಳು ಸೇರಿದಂತೆ ಪಕ್ಷದೊಳಗಿನ ಬಿಕ್ಕಟ್ಟನ್ನು ಸರಿಪಡಿಸಿಕೊಳ್ಳಲು ಪಕ್ಷದ ಹಿರಿಯ ನಾಯಕರ ನಿಯೋಗ ನಾಳೆ ಜಿಲ್ಲೆಗೆ ಬರಲಿದೆ. ನಿಯೋಗ ಜಿಲ್ಲೆಯಲ್ಲಿ ಎಲ್ಲರನ್ನೂ ಭೇಟಿಯಾಗಿ ಸಮಾಲೋಚನೆ ನಡೆಸಲಿದೆ. ಆ ಬಳಿಕ ಮತ್ತೊಮ್ಮೆ ಜಿಲ್ಲೆಗೆ ಭೇಟಿಕೊಟ್ಟು ಶಾಶ್ವತ ಶಾಂತಿ ಸ್ಥಾಪನೆ ಹೇಗೆ ಎಂಬ ಬಗ್ಗೆ ಜನರೊಂದಿಗೆ, ಪಕ್ಷದ ನಾಯಕರೊಂದಿಗೆ ಚರ್ಚಿಸಲಿದೆ. ನಮ್ಮದೇನಿದ್ದರೂ ಜಿಲ್ಲೆಯಲ್ಲಿ ಶಾಶ್ವತ ಶಾಂತಿ, ಸೌಹಾರ್ದ ವಾತಾವರಣ ಸೃಷ್ಟಿ ಮಾಡುವ ಜೊತೆಗೆ ಸಾಮರಸ್ಯದ ನಾಡನ್ನು ನಿರ್ಮಾಣ ಮಾಡುವುದು. ಇದಕ್ಕಾಗಿ ಪೊಲೀಸ್ ಅಧಿಕಾರಿಗಳ ಬದಲಾವಣೆಯಾಗಿದೆ. ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಲಾಗಿದೆ. ಇನ್ನು ಎಲ್ಲವೂ ನಿಯಂತ್ರಣಕ್ಕೆ ಬರುವ ವಿಶ್ವಾಸವಿದೆʼ ಎಂದರು. ಪತ್ರಿಕಾಗೋಷ್ಟಿಯಲ್ಲಿ ಪ್ರಕಾಶ್ ಸಾಲಿಯಾನ್, ಕೃಷ್ಣ ಶೆಟ್ಟಿ, ಪದ್ಮರಾಜ್ ಆರ್. ಪೂಜಾರಿ, ನೀರಜ್ ಪಾಲ್, ಮುಹಮ್ಮದ್ ಅಲಿ, ವಿಶ್ವಾಸ್ ಕುಮಾರ್ ದಾಸ್, ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.