ಗ್ರಾಮೀಣಾಭಿವೃದ್ಧಿ ಇಲಾಖೆಯ ನರೇಗಾ ಹೊರಗುತ್ತಿಗೆ ನೌಕರರ ವೇತನ ವಿಳಂಬ: ನಾಲ್ಕು‌ದಿನದೊಳಗೆ ವೇತನದ ಭರವಸೆ- ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಮನವಿಗೆ ಸ್ಪಂದಿಸಿದ ಗ್ರಾಮೀಣಾಭಿವೃದ್ಧಿ ಆಯುಕ್ತರು

ಪುತ್ತೂರು

news-details

ಪುತ್ತೂರು; ಕೇಂದ್ರ ಸರಕಾರದ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊರಗುತ್ತಿಗೆ ಆಧಾರದಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗಿರುವುದಿಲ್ಲ ಅಲ್ಲದೆ ಜನವರಿ 2025 ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆಯ ಸವಲತ್ತನ್ನೂ ಕೂಡ ಅನುಭವಿಸಲು ಸಾದ್ಯವಾಗಿರುವುದಿಲ್ಲ. ಇದರಿಂದಾಗಿ ತಳಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಇದೇ ಉದ್ಯೋಗವನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ಸಿಬ್ಬಂದಿಗಳಿಗೆ ಜೀವನ ನಿರ್ವಹಣೆ ಮಾಡಲು ಸಾಕಷ್ಟು ತೊಂದರೆಯುಂಟಾಗುತ್ತಿದೆ ಎಂಬ ಮನವಿಯನ್ನು ಶಾಸಕರ ಕಛೇರಿಯಲ್ಲಿ ಜೂ. 2 ರಂದು ಪುತ್ತೂರು ತಾಲೂಕಿನ ನರೇಗಾ ಸಿಬ್ಬಂದಿಗಳು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್‌ ಕುಮಾರ್‌ ರೈ ಅವರಿಗೆ ಸಲ್ಲಿಸಿದರು ಹಾಗೂ ಈ ಬಗ್ಗೆ ತತ್‌ಕ್ಷಣ ಶಾಸಕರು ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರಾದ ಪವನ್‌ ಕುಮಾರ್‌ ಮಾಲಪಾಟಿ ಅವರಿಗೆ ದೂರವಾಣಿ ಕರೆ ಮೂಲಕ ಮಾತುಕತೆ ನಡೆಸಿ ಶೀಘ್ರ ವೇತನ ಪಾವತಿಗೆ ಕ್ರಮವಹಿಸುವುದಾಗಿ ತಿಳಿಸಿದರು. ಅಲ್ಲದೆ ಶಾಸಕರು ಬೆಂಗಳೂರಿನ ಆಯುಕ್ತಾಲಯಕ್ಕೆ ಖುದ್ದು ತೆರಳಿ ಈ ಬಗ್ಗೆ ವಿಚಾರಿಸುವುದಾಗಿ ತಿಳಿಸಿದರು.

ನರೇಗಾ ಸಿಬ್ಬಂದಿಗಳು ಶಾಸಕರಿಗೆ ನೀಡಿದ ಮನವಿಯಲ್ಲಿ ಗ್ರಾಮೀಣ ಭಾಗದ ದುರ್ಬಲ ವರ್ಗದ ಜನರಿಗೆ/ಫಲಾನುಭವಿಗಳಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಸವಲತ್ತನ್ನು ಒದಗಿಸಿ ಕೊಡುವ ದೃಷ್ಠಿಯಿಂದ ತಿಂಗಳ ವೇತನ ಪಾವತಿಯಾಗದೆ ಇದ್ದರೂ ಸಾಲ ಮಾಡಿ ದಿನ ದೂಡುತ್ತಿದ್ದಾರೆ. ಈಗಾಗಲೇ ಉನ್ನತಾಧಿಕಾರಿಗಳಲ್ಲಿ ವೇತನ ಪಾವತಿಯ ಕುರಿತು ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ಯಾವುದೇ ಧನಾತ್ಮಕ ಸ್ಪಂದನೆ ದೊರೆಯದಿರುವ ಕಾರಣ ಇದೇ ವೇತನವನ್ನು ನಂಬಿಕೊಂಡಿರುವ ಸಿಬ್ಬಂದಿಗಳಿಗೆ ಕ್ಷೇತ್ರಮಟ್ಟಕ್ಕೆ ಪ್ರವಾಸ ನಡೆಸಿ, ಕೆಲಸ ನಿರ್ವಹಿಸಲು ಅಸಾಧ್ಯವಾಗಿರುತ್ತದೆ. ಅಲ್ಲದೇ ಈಗಾಗಲೇ ಸಿಬ್ಬಂದಿಗಳು ಅಲ್ಪ-ಸ್ವಲ್ಪ ಉಳಿತಾಯ ಮಾಡಿಕೊಂಡಿದ್ದ ಹಣವೂ ಪ್ರಯಾಣಕ್ಕೆ ಖರ್ಚಾಗಿರುತ್ತದೆ. ಹಾಗಾಗಿ ಇನ್ನು ಮುಂದೆ ಕಛೇರಿಗೆ ಹಾಜರಾಗಲು, ಗ್ರಾಮ ಪಂಚಾಯತ್ ಅಥವಾ ಕಾಮಗಾರಿ ಸ್ಥಳಕ್ಕೆ ತೆರಳಿ ಕೆಲಸ ಮಾಡಲು ಸಾಧ್ಯವಿಲ್ಲ.
ಜೂ.5 ರಿಂದ ಕರ್ತವ್ಯ ನಿರ್ವಹಿಸದಿರಲು ನಿರ್ಧಾರ
ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿರುವುದರಿಂದ ಬಾಕಿ ವೇತನ ಪಾವತಿಯ ಬಗ್ಗೆ ಗಂಭೀರ ಕ್ರಮಕೈಗೊಳ್ಳಲು ರಾಜ್ಯ ಮಟ್ಟದ ಅಧಿಕಾರಿಗಳ ಗಮನ ಸೆಳೆಯುವ ದೃಷ್ಟಿಯಿಂದ ಹಾಗೂ ನೌಕರರ ಮನೋಬಲ ಹೆಚ್ಚಿಸುವ ಉದ್ದೇಶದಿಂದ ದಿ:05/06/2025 ರಿಂದ ನರೇಗಾ ಯೋಜನೆಗೆ ಸಂಬಂದಪಟ್ಟ ಎಲ್ಲಾ ನೌಕರರು ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕೆಲಸವನ್ನು ನಿರ್ವಹಿಸದಿರಲು ರಾಜ್ಯ ಹಾಗೂ ಜಿಲ್ಲಾ ಹಂತದಲ್ಲಿ ತೀರ್ಮಾನಿಸಿದ್ದು, ವೇತನ ಪಾವತಿಯಾಗುವವರೆಗಿನ ನಮ್ಮ ಈ ಶಾಂತಿಯುತ ಪ್ರತಿಭಟನೆಗೆ ಸಹಕಾರ ನೀಡಬೇಕಾಗಿ ಕೋರಿದೆ ಹಾಗೂ ಇದರಿಂದಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯ ಪ್ರಗತಿಯು ಕುಂಠಿತವಾದಲ್ಲಿ ಸಿಬ್ಬಂದಿಗಳು ಹೊಣೆಗಾರರಾಗಿರುವುದಿಲ್ಲ ಎಂದು ಮನವಿಯಲ್ಲಿ ವಿನಂತಿಸಿಕೊಂಡಿರುತ್ತಾರೆ.

news-details