ಪಾಣಾಜೆ ಸುಬೋಧ ಪ್ರೌಢಶಾಲೆ 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ,ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಯವರಿಗೆ ಆಡಳಿತ ಮಂಡಳಿ ವತಿಯಿಂದ ಜೂ 6 ರಂದು ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಿತು.
*ಸಾಧನೆಯ ಹಿಂದೆ ಶಿಕ್ಷಕರ ಪೋಷಕರ ಶ್ರಮ ಇದೆ* ಉತ್ತಮ ಗುಣ ನಡತೆಯನ್ನು ಬೆಳೆಸಿಕೊಂಡು ವಿದ್ಯಾರ್ಜನೆ ಮಾಡಿದ ಶಾಲೆಗೆ ಹೆತ್ತವರಿಗೆ ಕೀರ್ತಿ ತಂದು ಮುಂದಿನ ಜೀವನದಲ್ಲಿ ಯಶಸ್ವಿಯಾಗಬೇಕು, ಹೆತ್ತವರನ್ನು ಗೌರವದಿಂದ ಕಾಣಬೇಕು ಎಂದು ಮುಖ್ಯ ಅತಿಥಿ ನಿವೃತ್ತ ಮುಖ್ಯ ಶಿಕ್ಷಕಿ ಪ್ರತಿಭಾ ಬೊಳ್ಳಿಂಬಳ ಮಕ್ಕಳಿಗೆ ಕರೆ ನೀಡಿದರು.
*ನಿರಂತರ ಕಲಿಯುವಿಕೆ ಅಗತ್ಯ*: ಮಕ್ಕಳು ಪಾಠಗಳನ್ನು ಪ್ರಾರಂಭದಿಂದಲೇ ನಿರಂತರವಾಗಿ ಕಲಿಯಬೇಕು. ಮಕ್ಕಳು ನಿಷ್ಠೆ ಹಾಗೂ ಶ್ರಮದಿಂದ ಕೆಲಸ ಮಾಡಬೇಕು, ವಿದ್ಯಾರ್ಜನೆ ಮಾಡಿದ ಶಾಲೆಯ ಹೆಸರು ಉಳಿಸಬೇಕು ಎಂದು ಮುಖ್ಯ ಅತಿಥಿ ಪಾಣಾಜೆ ಗ್ರಾಮ ಪಂಚಾಯತಿನ ಅಧ್ಯಕ್ಷೆ ಮೈಮನತುಲ್ ಮೆಹ್ರ ಮಕ್ಕಳಿಗೆ ತಿಳಿ ಹೇಳಿದರು.
*ಸತತವಾಗಿ ಶೇ100 ಫಲಿತಾಂಶ ಬರಬೇಕು* ಸುಬೋಧ ಪ್ರೌಢಶಾಲೆ ಸತತವಾಗಿ ಮೂರನೇ ವರ್ಷ ಶೇ 100 ಫಲಿತಾಂಶ ಗಳಿಸಿದೆ. ಮುಂದೆಯೂ ಶೇ 100 ಫಲಿತಾಂಶ ಬರುವಂತೆ ಪ್ರಯತ್ನಿಸಬೇಕು. ಹಿಂದಿನಂತೆ ಮುಂದೆಯೂ ನಗದು ಬಹುಮಾನ ನೀಡಿ ಗೌರವಿಸುತ್ತೇನೆ ಎಂದು ಸ್ನೇಹ ಟೆಕ್ಸ್ ಟೈಲ್ಸ್ ನ ಮಾಲಕ ವರದರಾಯ ನಾಯಕ್ ಮಕ್ಕಳಿಗೆ ಕರೆ ನೀಡಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಎಲ್ಲಾ ಮಕ್ಕಳಿಗೆ, ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಯವರಿಗೆ ಉಡುಗೊರೆ,ಸ್ಮರಣಿಕೆ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು. ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಉಪೇಂದ್ರ ಬಲ್ಯಾಯ ಅವರು ನೀಡಿದ ನೆನಪಿನ ಕಾಣಿಕೆ ಹಾಗೂ ದಿ. ಮಣ್ಣಂಗಳ ಶಾಮ ಭಟ್ ಮತ್ತು ದೇವಕಿ ಅಮ್ಮನವರ ಸ್ಮರಣಾರ್ಥ ಮಕ್ಕಳು ನೀಡಿದ ನಗದು ಬಹುಮಾನವನ್ನು ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಯವರಿಗೆ ವಿತರಿಸಲಾಯಿತು. ವಿದ್ಯಾರ್ಥಿಗಳಾದ ಸುಶ್ಮಿತಾ ಹಾಗೂ ತೃಪ್ತಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಪತಿ ಭಟ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಹಾಜಿ ಎಸ್ ಅಬೂಬಕ್ಕರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರವೀಂದ್ರ ಭಂಡಾರಿ, ಕೃಷಿಕ ಬಾಳೆಮೂಲೆ ಶಂಕರ ರೈ ಶುಭಾಶಂಸನೆಗೈ ದರು.
ಇದೇ ಸಂದರ್ಭದಲ್ಲಿ ಎನ್ ಎಮ್ ಎಮ್ ಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸ್ಕಾಲರ್ಶಿಪ್ ಗೆ ಅರ್ಹತೆ ಪಡೆದ ಮೂವರು ವಿದ್ಯಾರ್ಥಿಗಳನ್ನು ಶಾಲು ಹೊದಿಸಿ ಸ್ಮರಣಿಕೆ ಹಾಗೂ ಬಹುಮಾನ ನೀಡಿ ಗೌರವಿಸಲಾಯಿತು.
ಶಾಲಾ ಸಂಚಾಲಕ ಗಿಳಿಯಾಲು ಮಹಾಬಲೇಶ್ವರ ಭಟ್ ಪ್ರಸ್ತಾವಿಕವಾಗಿ ಮಾತನಾಡಿ ಶೇ 100 ಫಲಿತಾಂಶಕ್ಕೆ ಕಾರಣಕರ್ತರಾದ ಎಲ್ಲಾ ವಿದ್ಯಾರ್ಥಿಗಳನ್ನು ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯವರನ್ನು ಅಭಿನಂದಿಸಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭವನ್ನು ಹಾರೈಸಿ ಸರ್ವರನ್ನು ಸ್ವಾಗತಿಸಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಪೇಂದ್ರ ಬಲ್ಯಾಯ ದೇವಸ್ಯ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವಿದ್ಯಾರ್ಥಿನಿಯರಾದ ದೀಪಿಕಾ ಹಾಗೂ ಸಿಂಚನ ಪ್ರಾರ್ಥಿಸಿ ಮುಖ್ಯ ಶಿಕ್ಷಕಿ ನಿರ್ಮಲಾ ಕೆ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸುಧೀರ್ ಎಸ್ ಪಿ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿ ಸದಸ್ಯರು ಪೋಷಕರು ಶಿಕ್ಷಕರು ಹಾಜರಿದ್ದರು.
*ವರದರಾಯ ನಾಯಕ್ ಅವರಿಗೆ ಸನ್ಮಾನ*
ಸ್ನೇಹ ಟೆಕ್ಸ್ ಟೈಲ್ಸ್ ನ ಮಾಲಕ ವರದರಾಯ ನಾಯಕ್ ಅವರು ಸತತವಾಗಿ ಮೂರು ವರ್ಷಗಳಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ನೀಡಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಶಾಲೆಗೆ ಪ್ರಥಮ ಸ್ಥಾನ ಪಡೆದ ಸುಶ್ಮಿತಾ ಅವರಿಗೆ ರೂ 3000, ದ್ವಿತೀಯ ಸ್ಥಾನ ಪಡೆದ ತೃಪ್ತಿ ಅವರಿಗೆ ರೂ 2000, ತ್ರಿತೀಯ ಸ್ಥಾನ ಪಡೆದ ನೆಫೀಸತ್ ಮಶ್ ರೂಫ ಅವರಿಗೆ ರೂ 1000 ಹಾಗೂ ಉಳಿದ ಎಲ್ಲಾ ವಿದ್ಯಾರ್ಥಿಗಳಿಗೆ ರೂ 500 ರಂತೆ ನಗದು ಬಹುಮಾನ, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಯವರಿಗೆ ವಿಶೇಷ ಬಹುಮಾನ ನೀಡಿ ಗೌರವಿಸಿದರು. ಮುಂದೆಯೂ ಶಾಲೆಗೆ 100 ಶೇಕಡಾ ಫಲಿತಾಂಶ ಬಂದಲ್ಲಿ ಎಲ್ಲಾ ಮಕ್ಕಳನ್ನು ಹಾಗೂ ಶಿಕ್ಷಕರನ್ನು ಗೌರವಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ವರದರಾಯ ನಾಯಕ್ ಅವರನ್ನು ಶಾಲು ಹೊದೆಸಿ ಹಾರ ಹಾಕಿ ಪೇಟ ತೊಡಿಸಿ ಸ್ಮರಣಿಕೆ ನೀಡಿ ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು.